
ರಕ್ಷಿತ್ ಶೆಟ್ಟಿ ಹೇಳಿದ ಮಾತಿನಂತೆ ಉಡುಪಿಯಲ್ಲಿದ್ದಾರೆ. ಈ ಬಾರಿ ತಮ್ಮ ಜನ್ಮದಿನವನ್ನು ಅವರು ಅಲ್ಲೇ ಆಚರಿಸಿಕೊಂಡಿದ್ದಾರೆ. `ಅವನೇ ಶ್ರೀಮನ್ನಾರಾಯಣ’ದಂಥ ನಾಲ್ಕು ಭಾಷೆಯ ಚಿತ್ರ ನೀಡಿದ ಮೇಲೆಯೂ, ತವರೂರಿನ ಮನೆಯಲ್ಲಿ ನಾಲ್ಕು ಗೋಡೆಗಳ ನಡುವೆ ಸರಳವಾಗಿ ಜನ್ಮದಿನ ಆಚರಿಸಿದ್ದಾರೆ. ಅದಕ್ಕೆ ಒಂದು ರೀತಿಯಲ್ಲಿ ಕೊರೊನಾದ ಪರಿಸ್ಥಿತಿ ಕಾರಣವಾದರೆ ಮತ್ತೊಂದು ರೀತಿಯಲ್ಲಿ ಅವರ ಸಿಂಪಲ್ ಮನಸ್ಥಿತಿಯೂ ಕಾರಣ.

ಲಾಕ್ಡೌನ್ ಶುರುವಾದ ಎರಡೂವರೆ ತಿಂಗಳಿನಿಂದ ಬೆಂಗಳುರಿನ ಮನೆಯಲ್ಲಿಯೇ ಇದ್ದವರು ರಕ್ಷಿತ್. ಇದರ ಮಧ್ಯೆ ಮಾತಿಗೆ ಸಿಕ್ಕಾಗ ಮೊದಲು ಉಡುಪಿಗೆ ಹೋಗಬೇಕಿದೆ ಎಂದಿದ್ದರು. ನಿರೀಕ್ಷೆಯಂತೆ ಎರಡು ದಿಮಗಳ ಹಿಂದೆ ತವರೂರು ಸೇರಿಕೊಂಡಿದ್ದಾರೆ. ಅಲ್ಲಿ ತಂದೆ, ತಾಯಿ, ಅಣ್ಣ, ಅತ್ತಿಗೆ ಅವರ ಮಕ್ಕಳ ಜತೆ ಸಿಂಪಲ್ ಆಗಿ ಜನ್ಮದಿನವನ್ನು ಆಚರಿಸಿದ್ದಾರೆ. ಬೆಂಗಳೂರಲ್ಲಿದ್ದರೆ ಅವರನ್ನು ಅಭಿಮಾನಿಗಳು ಹುಡುಕಿಕೊಂಡು ಬರುವ ಸಾಧ್ಯತೆ ಹೆಚ್ಚಿತ್ತು. ಏನೇ ಆಚರಿಸುವುದಿಲ್ಲ ಎಂದರೂ ಬಂದವರು ಒಂದು ಹಾರ ಹಾಕಿ, ಸೋಶಿಯಲ್ ಡಿಸ್ಟೆನ್ಸ್ ಇರಿಸಿಕೊಂಡೇ ಒಂದು ಸೆಲ್ಫೀ ಕೇಳಲು ತಯಾರಾಗಿದ್ದರು. ಏನೇ ಮುನ್ನೆಚ್ಚರಿಕೆ ವಹಿಸಿದರೂ ಸಾರ್ವಜನಿಕವಾಗಿ ಜನ ಸೇರಿಸಿ ಅವಾಂತರಕ್ಕೆ ಕಾರಣವಾಗುವುದು ರಕ್ಷಿತ್ ಗೆ ಬೇಕಿರಲಿಲ್ಲ. ಹಾಗಾಗಿ ಇವನ್ನೆಲ್ಲ ಅವಾಯ್ಡ್ ಮಾಡಬೇಕೆಂದರೆ ಊರೇ ಉತ್ತಮ ಆಯ್ಕೆ ಎನ್ನುವುದು ಅವರಿಗೆ ಗೊತ್ತಿತ್ತು. ಊರಿಗೆ ಅರಸನಾದರೂ ತಾಯಿಗೆ ಮಗ ಎನ್ನುವಂತೆ ಸರಳವಾಗಿ ಮನೆಯವರೊಂದಿಗೆ ಬೆರೆತು ಜನ್ಮದಿನ ಆಚರಿಸಿದ್ದಾರೆ.

ಕರಾವಳಿಯ ಮಂದಿಗೆ ಒಂದು ಅಭ್ಯಾಸ ಇದೆ. ತಮ್ಮ ಊರಿನ ಮಂದಿ ಹೊರಗಡೆ ಎಷ್ಟೇ ಹೆಸರು ಮಾಡಿದರೂ ಊರಿನಲ್ಲಿ ಅವರಿಗೆ ಸಿಗುವ ಮರ್ಯಾದೆ ಸಾಧಾರಣ ಸ್ನೇಹಿತರಿಗೆ ನೀಡುವಂಥದ್ದೇ ಆಗಿರುತ್ತದೆ. ಬಹುಶಃ ಎಲ್ಲರ ತವರಲ್ಲಿಯೂ ಹೀಗೇ ಇರುತ್ತದೇನೋ ಗೊತ್ತಿಲ್ಲ. ಇತ್ತೀಚಿನ ವರ್ಷಗಳ ತನಕ ಅಲ್ಲಿ ಎಲ್ಲರಂತೆ ಬೈಕ್ ಏರಿ, ಸಾಮಾನ್ಯನಂತೆ ಒಂದು ರೌಂಡ್ ನಗರ ಸುತ್ತಾಡುವ ಅವಕಾಶ ರಕ್ಷಿತ್ ಗೆ ಇತ್ತು. ಜಾತ್ರೆ, ನೇಮ, ಕೋಲ, ಕಂಬಳಗಳನ್ನು ಮೀರಿಸುವ ಸಿನಿಮಾ ಅವರಲ್ಲಿಲ್ಲ. ಆದರೆ ಇತ್ತೀಚೆಗೆ ಅಲ್ಲಿಗೂ ಸಿನಿಮಾ ಕ್ರೇಜ್ `ಹೆಚ್ಚು’ ವ್ಯಾಪಿಸಿದೆ. ಅದರ ಪರಿಣಾಮ ರಕ್ಷಿತ್ ಅಭಿಮಾನಿಗಳು ಕೂಡ ತೋರಿಸುತ್ತಾರಾ ಎನ್ನುವುದು ಇಂದು ಸಂಜೆಯೊಳಗೆ ಅರಿವಾಗಲಿದೆ.
ಹನ್ನೊಂದು ಗಂಟೆಗೆ ಬಿಡುಗಡೆಯಾಗಲಿದೆ ಸ್ಪೆಷಲ್ ಟೀಸರ್

ಅತ್ತ ಉಡುಪಿಯಲ್ಲಿ ರಕ್ಷಿತ್ ಜನ್ಮದಿನಾಚರಣೆ ಮಾಡುತ್ತಿದ್ದರೆ ಇಲ್ಲಿ ‘777 ಚಾರ್ಲಿ’ ಚಿತ್ರದ ನಿರ್ದೇಶಕ ಕಿರಣ್ ರಾಜ್ ಸಿನಿಮಾದ ವಿಶೇಷ ಪೋಸ್ಟರ್ ಬಿಡುಗಡೆಗೊಳಿಸಿದ್ದಾರೆ. ಅದಕ್ಕೆ ರಾತ್ರಿ ಬೆಳಗಾಗುವುದರೊಳಗೆ ಒಳ್ಳೆಯ ಪ್ರತಿಕ್ರಿಯೆಗಳು ಲಭಿಸಿವೆ. ಇನ್ನು ಇದೀಗ ಹನ್ನೊಂದು ಗಂಟೆಗೆ ಚಿತ್ರದ ನಾಯಕನ ಪಾತ್ರವನ್ನು ವಿವರಿಸುವ ಸಣ್ಣದೊಂದು ಟೀಸರ್ ಬಿಡುಗಡೆಯಾಗಲಿದೆ. ಇದು `ಪರಮ್ವ ಸ್ಟುಡಿಯೋಸ್’ ಯೂಟ್ಯೂಬ್ ವಾಹಿನಿಯಲ್ಲಿ ಬಿಡುಗಡೆಯಾಗಲಿದೆ. “ನಾಯಕ ರಕ್ಷಿತ್ ನಟಿಸುವ ಧರ್ಮನ ಪಾತ್ರ ಹೇಗಿರುತ್ತದೆ ಎನ್ನುವ ಛಾಯೆ ಮತ್ತು ಮೇಕಿಂಗ್ ವಿಡಿಯೋದ ಕೆಲವು ಕ್ಲಿಪ್ಪಿಂಗ್ಸ್ ಸೇರಿಸಿ ಒಂದೂವರೆ ನಿಮಿಷದ ಸಣ್ಣ ಕಂಟೆಂಟ್ ಬಿಡುಗಡೆಗೊಳಿಸಲಿದ್ದೇವೆ” ಎಂದು ನಿರ್ದೇಶಕ ಕಿರಣ್ ರಾಜ್ ಸಿನಿಕನ್ನಡ.ಕಾಮ್ ಜತೆಗೆ ಹೇಳಿದ್ದಾರೆ. ಅಭಿಮಾನಿಗಳು ನಿಮಿಷ ಲೆಕ್ಕ ಹಾಕಿಕೊಂಡು ಕಾದಿದ್ದಾರೆ. ರಕ್ಷಿತ್ ಶೆಟ್ಟಿಗೆ ನಮ್ಮ ವತಿಯಿಂದ ಜನ್ಮದಿನದ ಹಾರ್ದಿಕ ಶುಭಾಶಯಗಳು.




