ಚಿತ್ರ ದುರ್ಬಳಕೆ ವಿರುದ್ಧ ಪ್ರಕರಣ ದಾಖಲಿಸಲಿರುವ ಶರತ್ ಲೋಹಿತಾಶ್ವ

ಜನಪ್ರಿಯ ನಟ ಶರತ್ ಲೋಹಿತಾಶ್ವ ಫುಲ್ ಗರಂ ಆಗಿದ್ದಾರೆ. ಅದಕ್ಕೆ ಕಾರಣ ಅವರ ಭಾವಚಿತ್ರದ ದುರ್ಬಳಕೆ. ಅಂದಹಾಗೆ ಅವರ ಫೊಟೊವನ್ನು ಬಳಸಿರುವುದು ಒಂದು ಖಾಸಗಿ ಯೂಟ್ಯೂಬ್ ವಾಹಿನಿಯಲ್ಲಿ. ಅದು ಕೂಡ ನಿರೂಪಕಿ ಅನು ಶ್ರೀಯ ತಂದೆ ಎನ್ನುವ ಹೆಸರಿನಲ್ಲಿ. ಇಂದು ಬೆಳಿಬೆಳಿಗ್ಗೆ ಅವರೇ ಖುದ್ದಾಗಿ ಫೋನ್ ಮಾಡಿ ಸಿನಿಕನ್ನಡ.ಕಾಮ್ ಜತೆಗೆ ಹಂಚಿಕೊಂಡ ತಮ್ಮ ಆತಂಕದ ಮಾತುಗಳನ್ನು ಇಲ್ಲಿ ದಾಖಲಿಸಿದ್ದೇವೆ.

ಅಪಪ್ರಚಾರ ಮಾಡಿದರೆ ಎಚ್ಚರಿಕೆ..!

“ಬೆಳಿಗ್ಗೆ ನನ್ನ ಸ್ನೇಹಿತ ಫೋನ್ ಮಾಡಿದ್ದ. ಏನು ಅಂತ ಕೇಳಿದ್ರೆ ವಾಟ್ಸ್ಯಾಪ್ ಗೆ ಒಂದು ಲಿಂಕ್ ಕಳಿಸಿದ್ದೇನೆ ನೋಡು, ಅಂದ. ನೋಡಿದ್ರೆ ಅದರಲ್ಲಿ ನನ್ನ ಫೊಟೋ ಹಾಕಿ ಅನು ಶ್ರೀ ತಂದೆ ಎನ್ನುವ ಅರ್ಥ ಬರುವ ಸುದ್ದಿ ಕೊಟ್ಟಿದ್ದಾರೆ!” ಎಂದು ಒಂದೇ ಉಸಿರಲ್ಲಿ ಹೇಳಿ ತಮ್ಮ ಕೋಪವನ್ನು ವ್ಯಕ್ತಪಡಿಸಿದರು ಶರತ್ ಲೋಹಿತಾಶ್ವ. “ನನ್ನದು ಕಲಾಕುಟುಂಬ. ನನ್ನ ತಂದೆ ಕೂಡ ಜನಪ್ರಿಯ ನಟ. ನಾನು ವಿವಾಹಿತನಾಗಿ ಪತ್ನಿ ಮಕ್ಕಳ ಜತೆಗೆ ನೆಮ್ಮದಿ ಬದುಕು ನಡೆಸುತ್ತಿದ್ದೇನೆ. ಸಿನಿಮಾಗಳ ಮೂಲಕವೂ ತಕ್ಕಮಟ್ಟಿಗೆ ಗುರುತಿಸಿಕೊಂಡಿದ್ದೇನೆ. ಇಂಥ ಸಂದರ್ಭದಲ್ಲಿ ಯಾರದೋ ತಂದೆ ಎನ್ನುವಂಥ ಗಾಸಿಪ್ ಮೂಲಕ ನನ್ನನ್ನು ಸುದ್ದಿಯಾಗಿಸುವ ಅಗತ್ಯ ನನಗಿಲ್ಲ. ತಮ್ಮ ವಾಹಿನಿ ಜನಪ್ರಿಯವಾಗಬೇಕು ಎನ್ನುವ ಕಾರಣಕ್ಕೆ ನನ್ನ ಫೊಟೋ ಬಳಕೆ ಮಾಡಿರುವವರು ಮಾಡಿರುವುದು ಅಕ್ಷಮ್ಯ. ಕಲಾವಿದರು ಎಂದರೆ ಇವರಿಗೆ ಬಿಟ್ಟಿ ಸಿಗುತ್ತಾರೆ ಎನ್ನುವ ಮನೋಭಾವ ಇರಬೇಕು. ವಿಷಯ ತಿಳಿದಾಕ್ಷಣ ಆ ಫೊಟೋ ತೆಗೆಯದಿದ್ದರೆ ನಾನು ಮಾನನಷ್ಟ ಮೊಕದ್ದಮೆ ಹೂಡಲಿದ್ದೇನೆ. ಅವರ ಸಂಸ್ಥೆಯ ಹೆಸರನ್ನು ನಾನು ಇಲ್ಲಿ ಹೇಳಬಯಸುವುದಿಲ್ಲ. ಹಾಗೆ ಅವರು ಕೂಡ ಪ್ರಚಾರ ಪಡೆಯಬೇಕಿಲ್ಲ. ಆ ಸುದ್ದಿಯ ಕೆಳಗೆ ಈಗಾಗಲೆ ನಾನೇ ಕಮೆಂಟ್ ಹಾಕಿದ್ದೇನೆ. ಆದರೂ ಇದುವರೆಗೆ ಅವರು ಆ ಚಿತ್ರ ಬದಲಾಯಿಸಿಲ್ಲ. ನಿಮ್ಮ ಮೂಲಕ ಅವರಿಗೆ ಸಾರ್ವಜನಿಕವಾಗಿ ವಾರ್ನಿಂಗ್ ಕೊಡುತ್ತಿದ್ದೇನೆ” ಎಂದು ಶರತ್ ಲೋಹಿತಾಶ್ವ ತಿಳಿಸಿದ್ದಾರೆ.

ಅನು ಶ್ರೀ ನೀಡಿದ ಪ್ರತಿಕ್ರಿಯೆ

ಈ ಬಗ್ಗೆ ನಾವು ಅನು ಶ್ರೀಯವರನ್ನು ಸಂಪರ್ಕಿಸಿದಾಗ ಅವರು ನೀಡಿದ ಪ್ರತಿಕ್ರಿಯೆ ಹೀಗಿತ್ತು. “ನಾನು ಎಷ್ಟು ಮಂದಿಗೆ ಎಂದು ಹೇಳಲು ಸಾಧ್ಯ? ಮಾಧ್ಯಮ ಕ್ಷೇತ್ರದಲ್ಲಿ ಇದ್ದಾರೆ ಎಂದರೆ ಅವರಿಗೆ ಯಾರ ಬಗ್ಗೆ ಏನು ಸುದ್ದಿ ಮಾಡುತ್ತಿದ್ದೇವೆ ಎನ್ನುವ ಜವಾಬ್ದಾರಿ ಇರಬೇಕು. ಅದರಲ್ಲಿಯೂ ಹುಡುಗಿಯ ಬಗ್ಗೆ ಸುದ್ದಿ ಮಾಡುವಾಗ ತಮ್ಮ ಮನೆಯಲ್ಲಿಯೂ ತಾಯಿ, ಪತ್ನಿ, ತಂಗಿ ಇದ್ದಾರೆ ಎನ್ನುವುದನ್ನು ನೆನಪು ಮಾಡಿಕೊಂಡಿರಬೇಕು. ಇಂಥ ಸುದ್ದಿ ಮಾಡುವವರು ಅಷ್ಟು ಮನಸಾಕ್ಷಿಯೂ ಇರದವರು ಎಂದ ಮೇಲೆ ಅವರ ಬೆನ್ನು ಬಿದ್ದು ತಿದ್ದಲು ನಮ್ಮಿಂದ ಸಾಧ್ಯವೇ? ನನ್ನ ಪರಿಚಯದ ಎಲ್ಲರಿಗೂ ನನ್ನ ತಂದೆ ಯಾರು ಎನ್ನುವುದು ಗೊತ್ತಿದೆ. ಹಾಗಾಗಿ ಇಂಥ ಸುದ್ದಿಯ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ” ಎಂದಿದ್ದಾರೆ.

ಬಹುಶಃ ಈ ವರ್ಷ ಹುಟ್ಟಿಕೊಂಡ ಆನ್ಲೈನ್ ಸುದ್ದಿ ಮಾಧ್ಯಮಗಳ ಸಂಖ್ಯೆ ಲೆಕ್ಕ ಹಾಕಿದರೆ ಅದೇ ಒಂದು ದಾಖಲೆಯಾಗಬಹುದು. ಅವುಗಳಿಗೆ ಸುದ್ದಿ ಮಾಡುವುದೂ ಒಂದು ಕಲೆ. ಆದರೆ ಕೆಲವರ ಪಾಲಿಗೆ ಅದು ಸತ್ಯದ ಕೊಲೆ! ಇಂಥ ಕೆಲಸ ಮಾಡಿರುವವರು ಕನ್ನಡದಲ್ಲಿನ ಇತರ ಸಭ್ಯ ಯೂಟ್ಯೂಬ್ ವಾಹಿನಿಗಳಿಗೂ ಕೆಟ್ಟ ಹೆಸರು ತರುತ್ತಿದ್ದಾರೆ. ಯಾರೂ ಇನ್ನು ಮುಂದೆ ಈ ರೀತಿಯ ಕೆಟ್ಟ ವರ್ತನೆ ತೋರಿಸದಿರಲು ಮತ್ತು ತಮ್ಮ ಸುದ್ದಿ ಪ್ರಚಾರದ ರೀತಿಯನ್ನು ತಿದ್ದಿಕೊಳ್ಳಲು ಇದು ಸರಿಯಾದ ಕಾಲವಾಗಿದೆ.

ಕೆಟ್ಟ ಮೇಲೆ ಬುದ್ಧಿ ಬಂತು..!

ಶರತ್ ಲೋಹಿತಾಶ್ವ ಅವರು ಕ್ರಮ ಕೈಗೊಳ್ಳಲು ಮುಂದಾಗುತ್ತಾರೆ ಎನ್ನುವ ಸಂದರ್ಭದಲ್ಲಿ ಯೂಟ್ಯೂಬ್ ನವರು ಕ್ಷಮೆ ಕೇಳಿದ್ದಾರೆ. ಆದರೆ ಅವರು ಫೊಟೊ ಬಳಸಿರುವುದಕ್ಕೆ ಸಮರ್ಥನೆಯಾಗಿ ನೀಡಿರುವ ಮಾತುಗಳು ಅರ್ಥಹೀನ ಎನ್ನುವಂತಿವೆ. ಇತರ ಯೂಟ್ಯೂಬ್ ಚಾನೆಲ್ ಗಳನ್ನು ನೋಡಿ ಹೀಗೆ ಮಾಡಿದ್ದಾರಂತೆ.!

Recommended For You

2 Comments

  1. ಬರವಣಿಗೆ , ಲೇಳನಗಳ ವಸ್ತು ಆಯ್ಕೆ ಚೆನ್ನಾಗಿ ಮೂಡಿಬರುತ್ತಿದೆ.

Leave a Reply

error: Content is protected !!