ಕಿರುಚಿತ್ರ ಸ್ಪರ್ಧಾ ವಿಜೇತರಿಗೆ 5 ಲಕ್ಷ..!

ಇದು ಕಿರುಚಿತ್ರಗಳ ಕಾಲ. ಲಾಕ್ಡೌನ್ ಆದ ಮೇಲೆಯಂತೂ ಕಿರುಚಿತ್ರ ಮತ್ತು ಕಿರುತೆರೆಗಳಿಗೆ ಮೊರೆ ಹೋದವರೇ ಹೆಚ್ಚು. ಸದ್ಯದ ಈ ಎರಡೂ ಜನಪ್ರಿಯ ಮಾಧ್ಯಮಗಳನ್ನು ಜತೆಯಾಗಿಸಲು ಬಂದಿದೆ `ಪ್ರಗುಣಿ ಕಿರುಚಿತ್ರೋತ್ಸವ ಸ್ಪರ್ಧೆ…!’ ಇಲ್ಲಿ ಪ್ರಗುಣಿ ಎಂದರೆ ಈ ಕಿರುಚಿತ್ರೋತ್ಸವದ ಮೂಲಕ ಲಾಂಚ್ ಆಗುತ್ತಿರುವ ಕನ್ನಡದ ಹೊಸ ಒಟಿಟಿ ಫ್ಲಾಟ್ಫಾರ್ಮ್. ಪ್ರಸ್ತುತ ಕಿರುತೆರೆಯಲ್ಲಿ ಫಾರ್ಮಲ್ಲಿರುವ ಒಂದಷ್ಟು ದಿಗ್ಗಜರು ಸೇರಿ ಮಾಡಿರುವ ಪ್ರಗುಣಿ ಕಲಾಪ್ರಿಯರ ಖುಷಿ ದ್ವಿಗುಣಿಸಲಿದೆ. ಅದಕ್ಕೆ ಕಿರು ಚಿತ್ರೋತ್ಸವ ಮತ್ತು ಸ್ಪರ್ಧೆ ಎರಡೂ ಸೇರಿಕೊಂಡಿರುವುದೇ ಉದಾಹರಣೆ. ಇಂಥದೊಂದು ಯೋಜನೆಯ ಹಿಂದಿನ ಮಾಸ್ಟರ್ ಮೈಂಡ್ ಗುರು ಪ್ರಸಾದ್ ಮುದ್ರಾಡಿಯವರ ಜತೆ ಸಿನಿಕನ್ನಡದ ಮಾತುಕತೆ ಇದು.

`ಪ್ರಗುಣಿ ಕಿರುಚಿತ್ರ ಸ್ಪರ್ಧೆ’ ಬಗ್ಗೆ ಹೇಳಿ

ಪ್ರಗುಣಿ ನಮ್ಮದೇ ಒಟಿಟಿ ಫ್ಲಾಟ್ಫಾರ್ಮ್. ಸದ್ಯಕ್ಕೆ ಇದರತ್ತ ಒಂದಷ್ಟು ಜನರ ಗಮನ ಸೆಳೆಯುವುದಕ್ಕೆಂದೇ ಕಿರುಚಿತ್ರ ಸ್ಪರ್ಧೆ ಆರಂಭಿಸಿದ್ದೇವೆ. ಇದು ಖಂಡಿತವಾಗಿ ಎಲ್ಲರ ಮನ ಸೆಳೆಯುವ ಬಗ್ಗೆ ಸಂದೇಹವಿಲ್ಲ. ಯಾಕೆಂದರೆ ನಾವು ನೀಡುತ್ತಿರುವ ಪ್ರಶಸ್ತಿ, ಪ್ರೋತ್ಸಾಹಗಳು ಆ ಮಟ್ಟದಲ್ಲಿರುತ್ತವೆ. ಅದರ ಸಂಪೂರ್ಣ ಮಾಹಿತಿ ನಮ್ಮ ಪ್ರಗುಣಿ ವೆಬ್‌ಸೈಟಲ್ಲೇ ಇದೆ. ಅದರ ಲಿಂಕ್ ಇಲ್ಲಿ ನೀಡಿದ್ದೇವೆ. ಸದ್ಯಕ್ಕೆ ಅದನ್ನು ಶಾರ್ಟ್ ಫಿಲ್ಮ್ ಸ್ಪರ್ಧೆಗೆ ಅಪ್ಲೈ ಮಾಡಲು ಬಳಸಿಕೊಳ್ಳಬಹುದು. ಆದರೆ ಯಾವುದೆಲ್ಲ ಸ್ಪರ್ಧೆಗೆ ಬಂದಿವೆ ಎನ್ನುವುದು ಸದ್ಯದ ಮಟ್ಟಿಗೆ ನಿಮಗೆ ಕಾಣಿಸುವುದಿಲ್ಲ. ಇದರ ಜ್ಯೂರಿ ಕಮಿಟಿ ಚೇರ್ಮನ್ ಟಿ.ಎನ್ ಸೀತಾರಾಮ್. ತೀರ್ಪುಗಾರರಾಗಿ ನಿರ್ದೇಶಕ ಪಿ ಶೇಷಾದ್ರಿ, ಪತ್ರಕರ್ತ ಜೋಗಿ ಮತ್ತು ಛಾಯಾಗ್ರಾಹಕ ಜಿ.ಎಸ್ ಭಾಸ್ಕರ್, ಕಾದಂಬರಿಗಾರ್ತಿ ಗೀತಾ ಬಿಯು ಮತ್ತು ಸಂಗೀತ ನಿರ್ದೇಶಕ ವಿ ಮನೋಹರ್ ಇದ್ದಾರೆ. ಮುಖ್ಯವಾಗಿ ಹೇಳಬೇಕೆಂದರೆ ಸ್ಪರ್ಧೆಯಲ್ಲಿ ಎರಡು ವಿಭಾಗ ಮಾಡಿದ್ದೇವೆ. ಒಂದು ಪ್ರೆಸೆಂಟ್ ಇನ್ನೊಂದು ಪಾಸ್ಟ್. ಅಂದರೆ ಒಂದು ಹೊಸದಾಗಿ ಕಿರುಚಿತ್ರ ಮಾಡಿ ಕೊಡುವುದು. ಇನ್ನೊಂದು ಮೂರು ವರ್ಷದೊಳಗಿನ ಕಿರುಚಿತ್ರವಾದರೂ ಅದನ್ನು ನಮಗೆ ಕಳಿಸುವುದು. ಅದು ಬೇರೆ ಕಡೆ ಪ್ರಶಸ್ತಿ ಪಡೆದ ಚಿತ್ರವಾದರೂ ಪರವಾಗಿಲ್ಲ. ಒಂದು ವೇಳೆ ಈಗಾಗಲೇ ಎಲ್ಲಾದರೂ ಪ್ರದರ್ಶನಗೊಳ್ಳುತ್ತಿದ್ದರೆ ನಮಗೆ ಕಳಿಸುವಾಗ ಅದನ್ನು ಅಲ್ಲಿಂದ ತೆಗೆದು ತೆಗೆಯಬೇಕಾಗುತ್ತದೆ. ಕಿರುಚಿತ್ರದಲ್ಲಿನ ವಸ್ತುಗಳಿಗೆ ನಾವು ಯಾವುದೇ ನಿಬಂಧನೆ ವಿಧಿಸುವುದಿಲ್ಲ. ಆದರೆ ವಯಸ್ಕರ ಚಿತ್ರ ಆಗಿರಬಾರದು. ಅನಿಮೇಶನ್ ಚಿತ್ರಗಳಿಗೆ ಅವಕಾಶ ಇಲ್ಲ. ಚಿತ್ರದ ಕಾಲಾವಧಿಯು 45 ನಿಮಿಷಕ್ಕಿಂತ ಹೆಚ್ಚಾಗಿರಬಾರದು.

ಪ್ರಗುಣಿ ವೆಬ್ಸೈಟ್ ಲಿಂಕ್ ಗಾಗಿ ಈ ವಾಕ್ಯದ ಮೇಲೆ ಕ್ಲಿಕ್ ಮಾಡಿ

ಪ್ರಗುಣಿ ಎನ್ನುವ ಒಟಿಟಿ ಮಾಡುವ ಆಸಕ್ತಿ ಬಂದಿದ್ದೇಕೆ?

ನಾವು ಈ ಯೋಜನೆ ಹಾಕಿದಂಥ ಸಂದರ್ಭ ಕನ್ನಡದಲ್ಲಿ ಯಾವುದೇ ಒಟಿಟಿ ಫ್ಲಾಟ್ ಫಾರ್ಮ್ ತಲೆ ಎತ್ತಿರಲಿಲ್ಲ. ಆದರೆ ಸರಿಯಾಗಿ ಸಕ್ರಿಯರಾಗಲು ಕಾರಣಾಂತರಗಳಿಂದ ಒಂದೂವರೆ ವರ್ಷ ಕಾಲಾವಧಿ ಬೇಕಾಯಿತು. ಇದೀಗ ಪ್ರಗುಣಿಯಲ್ಲಿ ನನ್ನ ಜತೆಗೆ ನಿರ್ಮಾಪಕರಾದ ನಿತ್ಯಾನಂದ ಭಟ್, ಪ್ರಸನ್ನ ಮತ್ತು ಸಾತ್ವಿಕ್ ಎನ್ನುವ ನಾಲ್ಕು ಮಂದಿ ಕೈ ಜೋಡಿಸಿದ್ದಾರೆ. ಈ ಕಿರುಚಿತ್ರ ಸ್ಪರ್ಧೆಗಳ ಮೂಲಕ ನಮ್ಮ ಪ್ರತಿಭೆಗಳು ಜಾಗತಿಕ ಮಟ್ಟದಲ್ಲಿ ಪ್ರೇಕ್ಷಕರನ್ನು ತಲುಪಲು ಸಾಧ್ಯವಾಗುತ್ತದೆ. ನೀವು ನಿಮ್ಮ ಕಿರುಚಿತ್ರವನ್ನು ಯೂಟ್ಯೂಬಲ್ಲಿ ಹಾಕಿದರೆ ಅದು ಸಮುದ್ರದಲ್ಲಿ ಹಾಕಿದಂತೆ. ಅವಸರಕ್ಕೆ ಒಂದು ಕಿರುಚಿತ್ರ ನೋಡಬೇಕಾದಾಗ ಯೂಟ್ಯೂಬಲ್ಲಿ ಅವುಗಳನ್ನೇ ಹುಡುಕಿಕೊಳ್ಳುವುದು ಕಷ್ಟ. ಆದರೆ `ಪ್ರಗುಣಿ’ಯಲ್ಲಿ ಕಿರುಚಿತ್ರಗಳೇ ಇರುವುದರಿಂದಾಗಿ ದೊಡ್ಡ ನಿರ್ದೇಶಕರುಗಳಿಗೆ ಪ್ರತಿಭೆಗಳನ್ನು ಪತ್ತೆ ಮಾಡಲು ಸುಲಭವಾಗುತ್ತದೆ. ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಒಂದು ವಿಶೇಷ ಮೊತ್ತವನ್ನು ಘೋಷಿಸಿದ್ದೇವೆ.

ನಿಮ್ಮ ಹಿನ್ನೆಲೆ ಬಗ್ಗೆ ವಿವರಿಸುವಿರಾ..?

ನಾನು ಬೆಂಗಳೂರು ದೂರದರ್ಶನದ ಆರಂಭ ಕಾಲದಿಂದಲೇ ಕಿರುತೆರೆಯಲ್ಲಿ ವೃತ್ತಿಯಲ್ಲಿದ್ದೇನೆ. ಧಾರಾವಾಹಿಗಳ ಸಹಾಯಕ ನಿರ್ದೇಶಕನಾಗಿ, ಪ್ರೊಡಕ್ಷನ್ ಕಂಟ್ರೋಲರ್ ಆಗಿ ಬಳಿಕ ಜಾಹೀರಾತು ವಿಭಾಗದಲ್ಲಿ ಪ್ರೊಡಕ್ಷನ್ ಮ್ಯಾನೇಜರ್, ಲೈನ್ ಪ್ರೊಡ್ಯೂಸರ್ ಆಗಿ ಬಾಲಿವುಡ್, ಹಾಲಿವುಡ್, ಫ್ರೆಂಚ್ ಸಿನಿಮಾಗಳಿಗೆ ಕೆಲಸ ಮಾಡಿದ ಅನುಭವವಿದೆ. ಅದಕ್ಕೆ ಕಾರಣ ಜಾಹೀರಾತುಗಳ ಮೂಲಕ ಸಿಕ್ಕ ಸಂಪರ್ಕಗಳೇ ಆಗಿವೆ. ಶಶಿಕಪೂರ್ ಪುತ್ರ ಕುನಾಲ್ ಕಪೂರ್ ಸಂಸ್ಥೆಯಲ್ಲಿ ಹಲವಾರು ಜಾಹೀರಾತುಗಳಿಗೆ ಕೆಲಸ ಮಾಡಿದ್ದೇನೆ. ರಾಮೋಜಿ ಫಿಲ್ಮ್ ಸಿಟಿ ಪ್ರೊಡಕ್ಷನ್ಸ್, ರಾಕೇಶ್ ಓಂ ಪ್ರಕಾಶ್ ಮೆಹ್ರ ಚಿತ್ರಗಳಿಗೆ ಕೆಲಸ ಮಾಡುವ ಮೂಲಕ `ರಂಗ್ ದೆ ಬಸಂತಿ’ಯಂಥ ದೊಡ್ಡ ಪ್ರಾಜೆಕ್ಟ್‌ನ ಭಾಗವಾಗಿದ್ದೇನೆ. ಟಿ ಎನ್ ಸೀತಾರಾಮ್ ಅವರೊಂದಿಗೆ ಟೆಲಿವಿಶನ್ ಕಾಲಕ್ಕೂ ಮೊದಲಿನಿಂದಲೇ ಆತ್ಮೀಯತೆ ಇದೆ. ಪ್ರಸ್ತುತ ನನ್ನ ಈ ಎಲ್ಲ ಅನುಭವಗಳನ್ನು ಮೂಲಕ ಕನ್ನಡದ ಹೊಸದೊಂದು ಒಟಿಟಿ ಫ್ಲಾಟ್ಫಾರ್ಮ್ ಮಾಡಿದ್ದೇನೆ. ಎಲ್ಲರ ಸಹಕಾರ ಖಂಡಿತವಾಗಿಯೂ ಅಗತ್ಯ.

Recommended For You

Leave a Reply

error: Content is protected !!