
ನಟಿ ಶುಭಾಪೂಂಜ ಹಸೆಮಣೆಯೇರಿದ್ದಾರೆ. ಸುಮಂತ್ ಮಹಾಬಲ ಎನ್ನುವ ಹುಡುಗನೊಡನೆ ಉಡುಪಿ ಜಿಲ್ಲೆಯ ಮಜಲಬೆಟ್ಟು ಬೀಡುವಿನಲ್ಲಿ ಸರಳ ವಿವಾಹವಾಗಿದ್ದಾರೆ. ಈ ಸಂದರ್ಭದಲ್ಲಿ ಕುಟುಂಬ ವರ್ಗದವರು ಮತ್ತು ಆತ್ಮೀಯರನ್ನಷ್ಟೇ ಆಹ್ವಾನಿಸಲಾಗಿತ್ತು.
ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಮೂಲಕ ಇತ್ತೀಚೆಗೆ ಹೆಚ್ಚು ಸುದ್ದಿಯಾದವರಲ್ಲಿ ಶುಭಾ ಪೂಂಜಾ ಕೂಡ ಒಬ್ಬರು. ಮೊಗ್ಗಿನ ಮನಸು ಎನ್ನುವ ಚಿತ್ರವೊಂದನ್ನು ಬಿಟ್ಟರೆ ಶುಭಾಪೂಂಜಾಗೆ ಬೇರೆ ಯಾವ ಸಿನಿಮಾಗಳು ಕೂಡ ಹೆಸರು ತಂದುಕೊಟ್ಟಿರಲಿಲ್ಲ. ಸಿನಿಮಾರಂಗದಲ್ಲಿ ಹೆಸರಿಗಿಂತ ಗಾಸಿಪ್ ಮೂಲಕವೇ ಸುದ್ದಿಯಾದ ಶುಭಾಪೂಂಜಾ ನಿಜಕ್ಕೂ ಜನಮನಗೆದ್ದಿದ್ದು
ಬಿಗ್ ಬಾಸ್ ಮೂಲಕ ಎಂದೇ ಹೇಳಬಹುದು. ಅದರಲ್ಲಿಯೂ ಬಿಗ್ ಬಾಸ್ ಸ್ಪರ್ಧಾ ವಿಜೇತ ಮಂಜು ಪಾವಗಡ ಜೊತೆಗಿನ ಆಕೆಯ ಆತ್ಮೀಯತೆ ಪ್ರೇಕ್ಷಕರಿಗೂ ಆತ್ಮೀಯವಾಗಿತ್ತು. ಇಂದು ನಡೆದ ವಿವಾಹಕ್ಕೂ ಮಂಜು ಪಾವಗಡ, ನಿರ್ದೇಶಕಿ ಸುಮನಾ ಕಿತ್ತೂರು ಮೊದಲಾದವರು ಆಗಮಿಸಿ ಶುಭ ಕೋರಿದ್ದು ಅವರ ಆಪ್ತತೆಗೆ ಸಾಕ್ಷಿಯಾಗಿತ್ತು.

ಕರಾವಳಿಯ ತಮ್ಮ ಊರಿನಲ್ಲಿ ಸರಳವಾಗಿ ವಿವಾಹವಾದರೂ ಬೆಂಗಳೂರಿನಲ್ಲಿ ಒಂದು ಅದ್ಧೂರಿ ಆರತಕ್ಷತೆ ಇರಿಸಿಕೊಳ್ಳುವುದಾಗಿ ಶುಭಾ ಪೂಂಜಾ ಈ ಹಿಂದೆ ಸಿನಿಕನ್ನಡ.ಕಾಮ್ ಜೊತೆಗೆ ಮಾತನಾಡುತ್ತಾ ಹೇಳಿಕೊಂಡಿದ್ದರು. ಆದರೆ ಬೆಂಗಳೂರಿನಲ್ಲಿ ಸದ್ಯ ಒಮಿಕ್ರಾನ್ ತಾಂಡವವಾಡುತ್ತಿರೋದನ್ನು ನೋಡಿದರೆ ದೊಡ್ಡ ಮಟ್ಟದ ಆರತಕ್ಷತೆ ಖಂಡಿತವಾಗಿ ಸಾಧ್ಯವಿಲ್ಲ. ಆದರೆ ಶುಭಾಪೂಂಜಾ ಅಭಿಮಾನಿಗಳ ಹಾರೈಕೆಗೆ ಕೊರತೆ ಇರುವುದಿಲ್ಲ ಎನ್ನುವುದಂತೂ ಸತ್ಯ.

