
ಕಾಂತಾರ ಕನ್ನಡಿಗರ ಅಭಿಮಾನದ ಚಿತ್ರ. ಆದರೆ ಕರಾವಳಿಯ ಒಂದಷ್ಟು ದೈವಾರಾಧಕರು ಮಾತ್ರ ಈ ಚಿತ್ರದಲ್ಲಿ ದೈವವನ್ನು ಬಳಸಿಕೊಂಡಿದ್ದರ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದರು. ಇದೇ ಸಂದರ್ಭದಲ್ಲಿ ಸಾಕಷ್ಟು ಮಂದಿ ಕರಾವಳಿಗರೇ, ನಮ್ಮ ದೈವದ ಶಕ್ತಿಯನ್ನು ತೋರಿಸುವ ಚಿತ್ರ ಮಾಡಿದ್ದಕ್ಕಾಗಿ ಅಭಿನಂದನೆಯನ್ನೂ ಸಲ್ಲಿಸಿದ್ದಾರೆ. ಆದರೆ ಆಕ್ರೋಶ ವ್ಯಕ್ತಪಡಿಸಿದವರು ಮಾತ್ರ ರಿಷಬ್ಗೆ, ಕಾಂತಾರ ತಂಡಕ್ಕೆ ದೈವದ ಕೋಪ ಮುಳುವಾಗಿದೆ ಎಂದು ಸಾಬೀತು ಮಾಡಲು ಇನ್ನಿಲ್ಲದ ಪ್ರಯತ್ನದಲ್ಲಿದ್ದಾರೆ. ಇದೇ ಪ್ರಯತ್ನವೇ ಕಾಂತಾರದ ವಿರುದ್ಧದ ಅಪ ಪ್ರಚಾರಕ್ಕೆ ಕಾರಣ ಅಂತಿದೆ ಚಿತ್ರತಂಡ.
ರಾಕೇಶ್ ಅಂತ್ಯಕ್ರಿಯೆಲ್ಲಿ ರಿಷಬ್ ಭಾಗಿಯಾಗಿಲ್ಲ.. ಕಾರಣವೇನು?
ಇದೊಂದು ಪ್ರಶ್ನೆ ರಿಷಬ್ ಅಭಿಮಾನಿಗಳು ಕೂಡ ಉತ್ತರಿಸಲು ತತ್ತರಿಸುವಂತೆ ಮಾಡಿದ್ದು ನಿಜ. ರಾಕೇಶ್ ಅಂತಿಮ ದರ್ಶನಕ್ಕೆ 500 ಕಿ.ಮೀ ದೂರದ ಬೆಂಗಳೂರಿನಿಂದ ಸೆಲೆಬ್ರಿಟಿಗಳು ಬಂದಿದ್ದಾರೆ. ಆದರೆ ಉಡುಪಿಯಿಂದ 40 ಕಿ.ಮೀ ದೂರವೂ ಇರದ ಕುಂದಾಪುರದಿಂದ ರಿಷಬ್ ಬಂದಿಲ್ಲ ಎನ್ನುವುದು ಆಪಾದನೆಯಾಗಿತ್ತು. ರಾಕೇಶ್ ಸಾವಿನ ವಿಚಾರದ ಅರಿವಾಗುವ ಹೊತ್ತಿಗೆ ರಿಷಬ್ ಸೇರಿದಂತೆ ಚಿತ್ರತಂಡದವರೆಲ್ಲ ಶೂಟಿಂಗ್ ಜಾಗ ಸೇರಿಕೊಂಡಾಗಿತ್ತು. ಅಂದಹಾಗೆ ಈ ಜಾಗ ಘಟನಾ ಸ್ಥಳದಿಂದ 20.ಕಿಮೀ ದೂರವಷ್ಟೇ ಅರ್ಧಗಂಟೆಯ ದಾರಿ ಎನ್ನುವುದು ನಿಜವಲ್ಲ. ಕುಂದಾಪುರದಿಂದ ಒಂದೂವರೆ ಗಂಟೆ ದೂರದ ಕಾಡಿನೊಳಗೆ ಚಿತ್ರೀಕರಣ ನಡೆದಿತ್ತು. ಕಾಡುದಾರಿ ಸೇರಿಕೊಳ್ಳಲು ಹೆಚ್ಚು ಸಮಯ ಬೇಕು ಎನ್ನುವ ಕಾರಣಕ್ಕೆ ಬಹಳ ಬೇಗನೆ ಹೊರಟು 800ರಷ್ಟು ಮಂದಿ ಸೆಟ್ ಸೇರಿಕೊಂಡಿದ್ದರು. ಫೈಟ್ ಮಾಸ್ಟರ್ ಮತ್ತು ಭಾಗಿಯಾಗುವ ಕಲಾವಿದರ ದಿನಾಂಕಗಳನ್ನು ಕಷ್ಟಪಟ್ಟು ಹೊಂದಿಸಲಾಗಿತ್ತು. ಚಿತ್ರೀಕರಣ ಸ್ಥಗಿತಗೊಳಿಸಿದರೆ ಮತ್ತೆ ರಿ ಶೆಡ್ಯೂಲ್ ಮಾಡಬೇಕಾಗುತ್ತದೆ. ಬೇಗ ಚಿತ್ರೀಕರಣ ಮುಗಿಸಿ, ರಾಕೇಶ್ ಅಂತ್ಯ ಸಂಸ್ಕಾರಕ್ಕೆ ಹೊರಡೋಣ ಎನ್ನುವುದು ರಿಷಬ್ ಲೆಕ್ಕಾಚಾರ ಆಗಿತ್ತು. ಸಾಮಾನ್ಯವಾಗಿ ಸಂಜೆ ಅಂತ್ಯ ಸಂಸ್ಕಾರ ನಡೆಯುವ ಕಾರಣ, ಅಷ್ಟು ಹೊತ್ತಿಗೆ ಅಂತಿಮ ದರ್ಶನಕ್ಕೆ ತಲುಪಬಹುದೆಂದು ರಿಷಬ್ ಅಂದುಕೊಂಡಿದ್ದರು. ಆದರೆ ನಿರೀಕ್ಷೆಗೂ ಮೊದಲೇ 4 ಗಂಟೆ ಸುಮಾರಿಗೇನೇ ರಾಕೇಶ್ ಪೂಜಾರಿಯನ್ನು ಚಿತೆಗೇರಿಸಲಾಗಿತ್ತು. ಆನಂತರ ಹೊರಟು ತಾಯಿಗೆ ಸಮಾಧಾನ ಹೇಳೋಣ ಎನ್ನುವಷ್ಟರಲ್ಲಿ ರಿಷಬ್ ಅಂತಿಮ ದರ್ಶನ ಮಾಡಿಲ್ಲ ಎನ್ನುವುದೇ ಚರ್ಚಾ ವಿಷಯವಾಗಿತ್ತು. ಈ ಸಂದರ್ಭದಲ್ಲಿ ಹೋಗಿ ಮತ್ತೆ ಅದಕ್ಕೆ ತುಪ್ಪ ಎರೆಯುವ ಬದಲು ರಾಕೇಶ ಕನಸುಗಳಿಗೆ ಸಹಕಾರ ನೀಡುವ ಬಗ್ಗೆ ಸದ್ಯದಲ್ಲೇ ತಾಯಿಯನ್ನು ಭೇಟಿಯಾಗಲಿರುವುದಾಗಿ ತಿಳಿದು ಬಂದಿದೆ.
ಕಪಿಲ್ ಸಾವಿನ ವಿಚಾರಕ್ಕೇನೇ ನಕ್ಕರಾ ಪ್ರಮೋದ್ ಶೆಟ್ಟಿ?
ಇನ್ನು ಪ್ರಮೋದ್ ಶೆಟ್ಟಿ ವಿಚಾರಕ್ಕೆ ಬಂದರೆ ಅವರು ನಗುವಿಗೆಂದೇ ಪ್ರಸಿದ್ಧರು. ಉಗ್ರ ಹೋರಾಟ ಉಂಟು ಎನ್ನುವ ಒಂದೇ ಒಂದು ಡೈಲಾಗ್ ನಿಂದ ಜನಪ್ರಿಯರಾದ್ರೂ, ಖಳ ಪಾತ್ರಗಳಲ್ಲಿ ಮುಂದುವರಿದ್ರೂ ನಾಯಕನಾಗಿ ಅವರೊಬ್ಬ ಲಾಫಿಂಗ್ ಬುದ್ಧ. ಆದರೆ ಇದೀಗ ಇದೇ ನಗುವಿನಿಂದಲೇ ಪ್ರಮೋದ್ ವಿವಾದಕ್ಕೆ ಒಳಗಾಗಿದ್ದಾರೆ.
ರಾಕೇಶ್ ಸಾವಿಗೂ ಐದು ದಿನಗಳ ಹಿಂದೆ ಕಪಿಲ್ ಎನ್ನುವ ಕಲಾವಿದನ ಸಾವಾಗಿತ್ತು. ಉಡುಪಿಯ ಸೌಪರ್ಣಿಕಾ ನದಿಯಲ್ಲಿ ಈಜಲು ಹೋಗಿದ್ದ ಕಪಿಲ್ ಸುಳಿಗೆ ಸಿಲುಕಿ ನಿಧನಗೊಂಡಿದ್ದರು. ಈ ಬಗ್ಗೆ ಪ್ರಮೋದ್ ಶೆಟ್ಟಿಯಲ್ಲಿ ವಿಚಾರಿಸಲು ಹೋದಾಗ ತೀರಿಕೊಂಡಿದ್ದು ಜ್ಯೂನಿಯರ್ ಆರ್ಟಿಸ್ಟ್ ಅಂತ ನಿಮಗಾದ್ರು ಗೊತ್ತಲ್ಲ ಎಂದು ನಕ್ಕಿದ್ದರು ಪ್ರಮೋದ್. ಸಾವು ಯಾರದ್ದಾದರೇನು? ಸಾವು ಸಾವೇ ಅಲ್ಲವೇ ಎಂದು ಈ ಬೈಟ್ ಕಂಡವರ ಪ್ರಶ್ನೆ.
ಸಾವು ಎನ್ನುವ ವಿಚಾರವನ್ನಷ್ಟೇ ತೆಗೆದುಕೊಂಡರೆ ಅದು ಯಾರನ್ನಾದರೂ ನೋವಿಗೆ ದೂಡುವಂಥ ವಿಚಾರ ಸತ್ಯ. ಆದರೆ ಈ ಸಾವು ಅನ್ನೋ ಪ್ರಶ್ನೆಯನ್ನೂ ಪ್ರಮೋದ್ ಮಾತಿನ ತಾತ್ಪರ್ಯವನ್ನೂ ಗಮನಿಸಬೇಕು. ಸತ್ತವರು ಯಾರು ಎಂದು ಗೊತ್ತಿಲ್ಲದೆ ಕೆಲವೊಂದು ಕಡೆಗಳಲ್ಲಿ ಕಾಂತಾರದ ಕಲಾವಿದ, ಕ್ಯಾಮರಾಮ್ಯಾನ್ ಎಂದೆಲ್ಲ ಸುದ್ದಿ ಮಾಡಿದ್ದಾರೆ. ಸತ್ತವರು ಯಾರು ಎಂದು ತಮಗೆ ತಿಳಿಯುವ ಮೊದಲೇ ಇತರರಿಗೆ ತಪ್ಪು ಮಾಹಿತಿ ಹಂಚಲೆತ್ನಿಸಿದ ಕೆಲವೊಂದು ಮಾಧ್ಯಮಗಳ ಅವಸರದ ಬಗ್ಗೆ ನೆನಪಿಸಿಕೊಂಡು ನಕ್ಕಿದ್ದರು ಪ್ರಮೋದ್ ಶೆಟ್ಟಿ. ಹಾಗೆ ನೋಡಿದರೆ ಈ ಸುದ್ದಿಗೆ ನಗುವುದಕ್ಕಿಂತಲೂ ಅಂಥ ಸುದ್ದಿ ಮಾಡಿದವರ ಬಗ್ಗೆ ಪ್ರಕರಣವನ್ನೇ ದಾಖಲಿಸಬಹುದು. ಮಾತ್ರವಲ್ಲ, ಸಾಮಾನ್ಯವಾಗಿ ಎಲ್ಲ ಚಿತ್ರಗಳಿಗೂ ಪ್ರಧಾನ ಛಾಯಾಗ್ರಾಹಕ ಒಬ್ಬರೇ ಇರುತ್ತಾರೆ. ಇಂಥ ಸಂದರ್ಭದಲ್ಲಿ ಛಾಯಾಗ್ರಾಹಕ ತೀರಿಕೊಂಡಿದ್ದಾಗಿ ಸುದ್ದಿ ಮಾಡಿದ್ರೆ, ಸುದ್ದಿ ಕೇಳಿದ ಛಾಯಾಗ್ರಾಹಕನ ತಾಯಿಗೆ ಹೃದಯಾಘಾತವಾಗದು ಎಂದು ಗ್ಯಾರಂಟಿ ಏನು?
ಪ್ರಮೋದ್ ಶೆಟ್ಟಿ ಬೈಟ್ ಕೊಡುವ ಮೊದಲೇ ಅರೆಬೆಂದ ಮಾಹಿತಿ ಕೊಡುವವರ ಕುರಿತಾಗಿ ನಕ್ಕಂಥ ನಗು ಅದು. ಆದರೆ ಆ ನಗುವಿನಿಂದ ಶುರುಮಾಡಿ ಬೈಟ್ ಪೋಸ್ಟ್ ಮಾಡಿದವರು ಪ್ರಮೋದ್ ಶೆಟ್ಟಿ ಜ್ಯೂನಿಯರ್ ಆರ್ಟಿಸ್ಟ್ ಬಗ್ಗೆ ಕಾಳಜಿ ಇರದ ಕ್ರೂರಿ ಎನ್ನುವಂತೆ ಚಿತ್ರಿಸಲು ನೋಡಿದ್ದಾರೆ. ಹೇಳಿಕೇಳಿ ಪ್ರಮೋದ್ ರಂಗಭೂಮಿಯಿಂದ ಬಂದಂಥ ಕಲಾವಿದ. ಇಂದಿಗೂ ರಂಗಭೂಮಿಯಲ್ಲಿ ಸಕ್ರಿಯರಾಗಿರುವವರು. ರಂಗನಟರು ಪ್ರತಿಯೊಂದು ಜೀವಿಯನ್ನು ಕೂಡ ಗೌರವಿಸುವವರೆಂದು ಹೇಳಬೇಕಿಲ್ಲ ತಾನೇ.
ಇನ್ನು ಕಾಂತಾರಕ್ಕೆ ಸಂಬಂಧಿಸಿದಂತೆ ಕಪಿಲ್ ನಟಿಸಲು ಬಂದಿದ್ದೇನೋ ನಿಜ. ಆದರೆ ಶೆಡ್ಯೂಲ್ ಬ್ರೇಕ್ ಇದ್ದಾಗ ಸ್ನೇಹಿತರ ಜೊತಗೆ ಈಜಾಡಲೆಂದು ಹೋಗಿದ್ದಾರೆ. ಸ್ನೇಹಿತರು, ಸ್ಥಳೀಯರು ಸುಳಿಯ ಬಗ್ಗೆ ಎಚ್ಚರಿಸಿದ್ದರೂ ತನಗೆ ಚೆನ್ನಾಗಿ ಈಜು ಗೊತ್ತೆನ್ನುವ ಹುಂಬ ಧೈರ್ಯದಿಂದ ಅಪಾಯವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಇಷ್ಟಕ್ಕೂ ಪ್ರಮೋಶ್ ಶೆಟ್ಟಿ ಘಟನಾ ಸ್ಥಳದಿಂದ ಈ ಬೈಟ್ ಕೊಟ್ಟಿದ್ದೇನೂ ಆಗಿರಲಿಲ್ಲ. ಬೇರೊಂದು ವಾತಾವರಣದಲ್ಲಿ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ್ದರಷ್ಟೇ. ಇದಲ್ಲದೆ ಸಾವಿನ ಮನೆಯಲ್ಲೂ ನಗು, ಅಥವಾ ಲವಲವಿಕೆ ಇರುವಂಥ ಸಾಧ್ಯತೆ ಇಲ್ಲವೇ? ಖಂಡಿತಾ ಇದೆ. ಅದು ಸಹಜ. ಆದರೆ ಕ್ಯಾಮರಾಗಳಿಗೆ, ದ್ವೇಷ ಹೊಂದಿದ ಟ್ರೋಲರ್ಸ್ಗೆ ಕಾಣಿಸಬಾರದು ಅಷ್ಟೇ.
ಸಾವಿನ ಮನೆಗೆ ಹೋಗಲು ಬಯಸದ ವಿ ರವಿಚಂದ್ರನ್!
ಸಾಮಾನ್ಯವಾಗಿ ನಟ ವಿ ರವಿಚಂದ್ರನ್ ಯಾರದೇ ಸಾವಿನ ಮನೆಗೂ ಕಾಲಿಡೋದು ಅಪರೂಪ. ಅದರಲ್ಲೂ ಕಣ್ಣೀರಾಗಿದ್ದನ್ನು ಕಂಡವರೇ ಇಲ್ಲ. ಇತ್ತೀಚೆಗೆ ಯಾರದ್ದಾದರೂ ಅಂತಿಮ ನಮನದಲ್ಲಿ ಕಾಣಿಸಿಕೊಂಡರೂ ಕೂಡ ಸತ್ತವರು ಜೀವಂತ ಇದ್ದಾಗಿನ ನೆನಪುಗಳನ್ನು ವಿಷಾದ ನಗೆಯೊಂದಿಗೆ ನಕ್ಕು ಹಂಚಿದ ಉದಾಹರಣೆಗಳಿವೆ. ಹಾಗಂತ ರವಿಚಂದ್ರನ್ ಅವರದ್ದು ಸಾವಿಗೆ ನೊಂದುಕೊಳ್ಳದ ವ್ಯಕ್ತಿತ್ವವೇ? ಖಂಡಿತ ಅಲ್ಲ.
ತಂದೆ ವೀರಾಸ್ವಾಮಿ ತೀರಿಕೊಂಡ 3 ದಶಕಗಳ ಬಳಿಕವೂ ರವಿಚಂದ್ರನ್ ಹೆಚ್ಚಿನ ವೇದಿಕೆಗಳಲ್ಲಿ ಅಪ್ಪನ ಜತೆಗಿನ ತಮ್ಮ ಪ್ರೀತಿಯ ಬಗ್ಗೆ ಹೇಳುತ್ತಿರುತ್ತಾರೆ. ಆದರೆ ಅದೇ ತಂದೆಯ ಸಾವಿನ ಸಂದರ್ಭದಲ್ಲಿ ಮನೆಗೆ ಬಂದವರನ್ನೆಲ್ಲ ಸ್ವಾಗತಿಸಿ ಚುರುಕಿನಿಂದ ಓಡಾಡಿದ್ದವರು ಇದೇ ರವಿಚಂದ್ರನ್. ಇದೇ ಕಾರಣಕ್ಕಾಗಿ ಅಂದೇ ತಾವು ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾಗಿ ಖುದ್ದು ರವಿಚಂದ್ರನ್ ಹೇಳಿಕೊಳ್ಳುತ್ತಿರುತ್ತಾರೆ. ಆದರೆ ಅಂದು ಇಂದಿನಂತೆ ಸೋಶಿಯಲ್ ಮೀಡಿಯಾ ಇರದ ಕಾರಣ ದೊಡ್ಡ ಮಟ್ಟದ ಅಪಪ್ರಚಾರದಿಂದ ಪಾರಾಗಿದ್ದರು.
ಸಾವಿನ ಸಂದರ್ಭದಲ್ಲಿ ಇತರರ ಮನಸ್ಥಿತಿ ಬಗ್ಗೆ ಮನಶಾಸ್ತ್ರ ಏನು ಹೇಳುತ್ತದೆ?
ಹುಟ್ಟು ಸಾವು ಎನ್ನುವುದು ಮನುಷ್ಯರಿಗೆ ಭಾವನಾತ್ಮಕ ವಿಚಾರ. ಭಾರತೀಯರು ಭಾವನೆಗಳನ್ನು ಇದೇ ರೀತಿ ವ್ಯಕ್ತಪಡಿಸಬೇಕು ಎನ್ನುವುದು ಹಾಕಿಕೊಂಡು ಬಂದ ನಿಯಮ. ಪತಿಯ ನಿಧನವಾದಾಗ ಜತೆಯಲ್ಲೇ ಜೀವಂತ ಚಿತೆ ಏರಬೇಕು ಎನ್ನುವಲ್ಲಿಂದ ಎರಡು ತೊಟ್ಟು ಕಣ್ಣೀರು ಹಾಕಲೇಬೇಕು ಎನ್ನುವ ತನಕ ಮನುಷ್ಯರೇ ಕಟ್ಟಿಕೊಂಡ ನಿಯಮಗಳಿವು.
ಕಾರಣ ಏನೇ ಇರಲಿ, ಈಗ ಸಾವಿಗೆ ವಯಸ್ಸಿಲ್ಲ ಎನ್ನುವುದನ್ನು ಜನ ಅರಗಿಸಿಕೊಳ್ಳುವಂತಾಗಿದೆ. ಹೊಸ ಮದುಮಗ ಕೂಡ, ‘ಸದ್ಯದಲ್ಲೇ ತಾನು ದಿಢೀರೆಂದು ನಾನು ಸತ್ತರೆ ನೀನು ಬೇರೆ ಮದುವೆ ಆಗಲೇಬೇಕು’ ಎಂದು ಹುಡುಗಿಯಿಂದ ಮಾತು ತೆಗೆದುಕೊಳ್ಳಬಲ್ಲ. ಆದರೆ ಅದೇ ವಿಧವೆ ವರ್ಷದೊಳಗೇನಾದರೂ ಬೇರೆ ಮದುವೆಯಾದರೆ ಸೋಶಿಯಲ್ ಮೀಡಿಯಾ ಸುಮ್ಮನಿರುವುದೇ?
ಯಾರದೇ ಸಾವಿನ ಮನೆಯಲ್ಲು ಕೂಡ ದುಃಖದ ಮಧ್ಯೆ ಒಂದೆರಡು ಕ್ಷಣಗಳಾದರೂ ನಗು ಪ್ರವೇಶಿಸುತ್ತಲೇ ಇರುತ್ತದೆ. ಕಾರಣ ಇಷ್ಟೇ ವೈಯಕ್ತಿಕವಾಗಿ ಯಾರ ಮನಸ್ಸು ಕೂಡ ದುಃಖವನ್ನು ಬಯಸುವುದಿಲ್ಲ. ಯಾವ ಪ್ರಯತ್ನವೂ ಇಲ್ಲದೆ ದುಃಖದಿಂದ ಹೊರಬರಲು ಪ್ರಯತ್ನಿಸುತ್ತಿರುತ್ತದೆ. ಸಾವಿನ ಮನೆಯಲ್ಲಿ ಬದುಕಿ ಉಳಿದವರು ಕಣ್ಣೀರಾಗಲೂಬಹುದು. ಕೆಲವರಾದರೂ ಉಳಿದಿದ್ದಾರಲ್ಲ ಎನ್ನುವ ನಿರಾಳತೆ ನಗು ತರಲೂಬಹುದು. ನಗು ತರದಿದ್ದರೂ ಮನದೊಳಗೆ ನಿರಾಳತೆ ತಂದೇ ತರುತ್ತದೆ. ನಿಷ್ಕಲ್ಮಶ ಮನಸ್ಥಿತಿಯವರ ಮುಖದಲ್ಲಿ ಬದುಕಿ ಉಳಿದವರ ಬಗ್ಗೆ ಖುಷಿ ಪ್ರಕಟವಾಗಿಬಿಡುತ್ತದೆ. ಸಮಾಜಕ್ಕೆ ಹೆದರಿ ನಾಟಕ ಮಾಡುವವರು ಮುಖ ಬಿಗಿಹಿಡಿಯಲೇ ಬೇಕಾಗುತ್ತದೆ.