ಮಂತ್ರಾಲಯದಲ್ಲಿ ‘ರಾಯರ ದರ್ಶನ’ ಗೀತೆಯ ಅನಾವರಣ

ಲಕ್ಷ್ಮೀ ಗಣೇಶ ಪ್ರೊಡಕ್ಷನ್ಸ್ ಸಹಯೋಗದಲ್ಲಿ ದಿ ನ್ಯೂ ಇಂಡಿಯನ್ ಟೈಮ್ಸ್ ಅಕಾಡೆಮಿ ಅರ್ಪಿಸುವ ‘ರಾಯರ ದರ್ಶನ’ ಅಲ್ಬಮ್ ಸಾಂಗ್ ಅನಾವರಣ ಸಮಾರಂಭ ಇತ್ತೀಚೆಗೆ ಮಂತ್ರಾಲಯದಲ್ಲಿ ನಡೆದ ಅದ್ದೂರಿ ನೆರವೇರಿತು. ಈ ಹಾಡನ್ನು ಮಂತ್ರಾಲಯದ ಶ್ರೀಸುಬುಧೇಂದ್ರ ತೀರ್ಥರು ಬಿಡುಗಡೆ ಮಾಡಿ ಅನುಗ್ರಹ ಸಂದೇಶ ನೀಡಿದರು.

ಜಾತ್ಯತೀತವಾಗಿ ಎಲ್ಲಾ ರಾಯರ ಭಕ್ತರ ಸಹಕಾರದಿಂದ “ರಾಯರ ದರ್ಶನ” ಆಲ್ಬಂ ಸಾಂಗ್ ಬಹಳ ಚೆನ್ನಾಗಿ ಮೂಡಿಬಂದಿದೆ. ರಘು ಭಟ್ ನಿರ್ದೇಶನದಲ್ಲಿ ಹಾಗೂ ಸುಗುಣ ಭಟ್ ಅವರ ನಿರ್ಮಾಣದಲ್ಲಿ, ಅಜನೀಶ್ ಲೋಕನಾಥ್ ಅವರ ಸ್ವರ ಸಂಯೋಜನೆಯಲ್ಲಿ ಹಾಗೂ ಅಬ್ಬಿ ವಿ ಅವರ ಗಾಯನದಲ್ಲಿ ಅದ್ಭುತವಾಗಿ ಮೂಡಿಬಂದಿರುವ ಈ ಆಲ್ಬಂನಲ್ಲಿ ಬರೀ ಹಾಡನ್ನು ಮಾತ್ರ ತೋರಿಸದೆ, ಮಠದಲ್ಲಿ ನಡೆಯುವ ಪೂಜೆ, ದೈನಂದಿನ ಉತ್ಸವ ಹಾಗೂ ವಾರ್ಷಿಕ ಉತ್ಸವಗಳನ್ನು ತುಂಬಾ ಚೆನ್ನಾಗಿ ತೋರಿಸಿದ್ದಾರೆ. ಈ ಆಲ್ಬಂ ಸಾಂಗ್ ಗೆ ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಹಾಗೂ ಕಾರ್ಯಕ್ರಮಕ್ಕೆ ಆಗಮಿಸಿದ ರಾಯರ ಭಕ್ತರಿಗೆ ಗುರುರಾಯರ ಅನುಗ್ರಹ ಸದಾ ಇರಲಿ ಎಂದು ಶ್ರೀಸುಬುಧೇಂದ್ರ ತೀರ್ಥರು ಸಂದೇಶ ನೀಡಿದರು.

“ರಾಯರ ದರ್ಶನ” ಗೀತೆಯ ನಿರ್ದೇಶಕ ರಘು ಭಟ್‌ ಮಾತನಾಡಿ, ‘ಕಳೆದ ಎಂಟು ತಿಂಗಳಿಂದ ಶ್ರಮ ಪಟ್ಟು ಈ ಹಾಡು ಮಾಡಲಾಗಿದೆ. ನೈಜತೆಗೆ ಹತ್ತಿರವಾಗಿ ಚಿತ್ರೀಕರಣ ಮಾಡಿದ್ದೇವೆ. ನನಗೆ ತಿಳಿದ ಹಾಗೆ ಇಡೀ ಭಾರತದಲ್ಲೇ ಮಠದ ಕುರಿತಾಗಿ ಸಮಗ್ರವಾದ ವಿಡಿಯೋ ಸಾಂಗ್ ಮಾಡಿಲ್ಲ. ಇದು ಮಾಡಿರುವುದು ನಾವೇ ಮೊದಲಿಗರು ಎನ್ನಬಹುದು. ತುಂಬಾ ಚೆನ್ನಾಗಿ ಆಲ್ಬಂ ಸಾಂಗ್ ಬಂದಿದೆ. ಒಂದು ವರ್ಷದಲ್ಲಿ ಮಂತ್ರಾಲಯದಲ್ಲಿ ಏನೆಲ್ಲಾ ಕಾರ್ಯಕ್ರಮ ನಡೆಯುತ್ತವೆ ಎಂಬುದನ್ನು ಹಾಡಿನಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ. ನಾನು ರಾಯರ ಭಕ್ತನಾಗಿ ಇದನ್ನು ಮಾಡಿದ್ದೇನೆ. ಈ ಸಂದರ್ಭದಲ್ಲಿ ಶ್ರೀಸುಬುಧೇಂದ್ರ ತೀರ್ಥರಿಗೆ ವಿಶೇಷ ಧನ್ಯವಾದ ತಿಳಿಸುತ್ತೇನೆ. ಸಹಕಾರ ನೀಡಿದ ನಮ್ಮ ತಂಡಕ್ಕೆ ಧನ್ಯವಾದ ಹೇಳುತ್ತೇನೆ. ನಮ್ಮ ಲಕ್ಷ್ಮೀ ಗಣೇಶ ಪ್ರೊಡಕ್ಷನ್ ಯೂಟ್ಯೂಬ್ ಚಾನೆಲ್ ನಲ್ಲಿ ಹಾಡನ್ನು ಎಲ್ಲರೂ ನೋಡಬಹುದು’ ಎಂದರು. ಸಂಗೀತದ ಕುರಿತು ಅಜನೀಶ್ ಲೋಕನಾಥ್ ಮಾಹಿತಿ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಹಿರಿಯ ನಟಿ ಗಿರಿಜಾ ಲೋಕೇಶ್, ಸಿ.ಆರ್ ಬಾಬಿ, ಪ್ರಾಜೆಕ್ಟ್‌ ಹೆಡ್ ಶ್ರೀನಿಧಿ ಕರಣಂ, ಗಾಯಕ ಅಬ್ಬಿ ವಿ, ನಿರ್ಮಾಪಕಿ ಸುಗುಣ ರಘು, ಶ್ರೀಶ ಜೋಯಿಸ್, ಛಾಯಾಗ್ರಾಹಕ ನಾಗೇಶ್ ಆಚಾರ್ಯ ತಮ್ಮ ಅಭಿಪ್ರಾಯ ಹಂಚಿಕೊಂಡರು.

ಸುಬುಧೇಂದ್ರರಿಗೆ ಮಾಧ್ಯಮ ಪ್ರಶಸ್ತಿ!
ಪ್ರತಿ ವರ್ಷ ನಾವು ಜೂನ್ ನಲ್ಲಿ ಟಿ.ಎನ್.ಐ.ಟಿ. ಮೀಡಿಯಾ ಅವಾರ್ಡ್ ಕೊಡುತ್ತಾ ಬಂದಿದ್ದೀವಿ. ಈ ವರ್ಷ ರಾಯರ ದರ್ಶನ ಅಲ್ಬಮ್ ಗೀತೆ ಬಿಡುಗಡೆ ಇದ್ದದ್ದರಿಂದ ಈ ವರ್ಷದ ಅವಾರ್ಡ್ ಗಳನ್ನು ಸೆಪ್ಟೆಂಬರ್ ನಲ್ಲಿ ಕೊಡುತ್ತಿದ್ದೇವೆ. ಆದರೆ, ಈ ವರ್ಷದ ಟಿ.ಎನ್.ಐ.ಟಿ ಮೊದಲ ಮೀಡಿಯಾ ಅವಾರ್ಡ್ ಅನ್ನು ನಾವು ಸುಬುಧೇಂದ್ರ ತೀರ್ಥರಿಗೆ ನೀಡುತ್ತಿದ್ದೇವೆ. ಶ್ರೀಗಳು ಈ ಮೊದಲು ಪೂರ್ವಾಶ್ರಮದಲ್ಲಿ ಇದ್ದಾಗ ಪತ್ರಕರ್ತರಾಗಿದ್ದರು. ಹಾಗಾಗಿ ಈ ವರ್ಷದ ಮೊದಲ ಟಿ.ಎನ್.ಐ.ಟಿ ಅವಾರ್ಡ್ ಅನ್ನು ಈ ವೇದಿಕೆಯಲ್ಲಿಯೇ ಶ್ರೀಗಳವರಿಗೆ ಕೊಡುತ್ತಿದ್ದೇವೆ ಎಂದು ಇದೇ ಸಂದರ್ಭದಲ್ಲಿ ರಘು ಭಟ್ ತಿಳಿಸಿದರು. ‌‌‌

ಆ ಬಳಿಕ ಚಿತ್ರರಂಗ ಸೇರಿದಂತೆ ವಿವಿಧ ಕ್ಷೇತ್ರಗಳ ಹಲವು ಗಣ್ಯರ ಸಮ್ಮುಖದಲ್ಲಿ ಶ್ರೀಗಳಿಗೆ ಪ್ರಶಸ್ತಿ ನೀಡಲಾಯಿತು. ಈ ಅದ್ದೂರಿ ಸಮಾರಂಭಕ್ಕೆ ಸಂಪಾದಕ ರವಿ ಹೆಗಡೆ, ಹಿರಿಯ ನಟರಾದ ಶ್ರೀನಾಥ್, ಮುಖ್ಯಮಂತ್ರಿ ಚಂದ್ರು, ನೆನಪಿರಲಿ ಪ್ರೇಮ್, ನಟಿಯರಾದ ಗಿರಿಜಾ ಲೋಕೇಶ್, ತಾರಾ ಅನುರಾಧ, ಸುಧಾರಾಣಿ, ಮಾನ್ವಿತಾ, ಭಾವನಾ ರಾವ್ ಮುಂತಾದವರು ಆಗಮಿಸಿದ್ದರು.

Recommended For You

Leave a Reply

error: Content is protected !!