ಹರೀಶ್ ರಾಜ್ ಅವರಿಗೆ ಸಿನಿಮಾದಲ್ಲಿ ಮಾತ್ರವಲ್ಲ, ಕಿರುತೆರೆಯಲ್ಲಿ ಕೂಡ ಅಭಿಮಾನಿಗಳಿದ್ದಾರೆ. ಆದರೆ ಇಷ್ಟು ದಿನ ನಾವು ನೋಡಿ ಇರದ ಹರೀಶ್ ರಾಜ್ ಈಗ ಪ್ರತ್ಯಕ್ಷವಾಗುತ್ತಿದ್ದಾರೆ. ಪ್ಲೇ ಬಾಯ್ ರೂಪದಲ್ಲಿ ಎಲ್ಲರನ್ನು ಕಾಡಲು ಸಿದ್ಧವಾಗಿದ್ದಾರೆ. ಅದು ಲವ್ ಕಾಕ್ಟೇಲ್ ಚಿತ್ರದ ಮೂಲಕ.
ಇತ್ತೀಚೆಗಷ್ಟೇ ಹರೀಶ್ ರಾಜ್ ತಮ್ಮ ‘ಲವ್ ಕಾಕ್ಟೇಲ್’ ಸಿನಿಮಾದ ಮೇಕಿಂಗ್, ಸಾಂಗ್ಸ್ ಗಳನ್ನ ಬಿಟ್ಟು ತಮ್ಮ ನಟನೆಯ ಮತ್ತೊಂದು ಮಗ್ಗುಲನ್ನು ವೀಕ್ಷಕರಿಗೆ ಪರಿಚಯ ಮಾಡಿಕೊಟ್ಟಿದ್ದಾರೆ. ಅದರಲ್ಲೂ ಲವ್ ಫೇಲ್ಯೂರ್ ಆದ್ರೆ ಏನಂತೆ, ಲೈಫ್ ನ ಹೇಗೆ ಜಾಲಿಯಾಗಿ ಕಳೆಯಬಹುದು ಎಂಬುದನ್ನು ಇದರಲ್ಲಿ ತೋರಿಸುವ ಯೋಜನೆ ಇಟ್ಟಿದ್ದಾರೆ. ಅವರದ್ದೇ ಬತ್ತಳಿಕೆಯಲ್ಲಿ ಬಂದ ಕಥೆ ಇದಾಗಿದ್ದು, ನಿರ್ದೇಶನವನ್ನು ಅವರೇ ಮಾಡಿದ್ದಾರೆ. ಈ ಬಗ್ಗೆ ಹರೀಶ್ ರಾಜ್ ಹೇಳಿದ್ದು ಹೀಗೆ, ಇಂಡಸ್ಟ್ರಿಯ ಜರ್ನಿಗೆ 30 ವರ್ಷ, ನನಗೀಗ 50 ವರ್ಷ. ಈ ಸಂತಸವನ್ನ ಎಲ್ಲರ ಜೊತೆಗೆ ಹಂಚಿಕೊಳ್ಳುವುದಕ್ಕೆ ಇಷ್ಟಪಡ್ತಾ ಇದ್ದೀನಿ. ಉಮೇಶ್ ಅಣ್ಣ ಒಳ್ಳೆಯ ಪಾತ್ರ ಮಾಡಿದ್ದರು. ಆದರೆ ಇಂದು ಅವರು ನಮ್ಮ ಜೊತೆಗೆ ಇಲ್ಲ. ಅಭಿನಯ ಮೇಡಂ ಜೊತೆಗೆ ಈ ಹಿಂದೆ ಒಂದು ಕಾಮಿಡಿ ಪಾತ್ರ ಮಾಡಿದ್ದೆ. ಇಲ್ಲಿ ಮತ್ತೆ ಜತೆ ಆಗಿದ್ದೀವಿ. ಉಮಾಶ್ರೀ ಅಮ್ಮ ಅದ್ಭುತವಾಗಿ ಕಾಡ್ತಾರೆ. ಈ ಸಿನಿಮಾದ ಟೈಟಲ್ ಅನ್ನು ಈ ಮೊದಲು ವೆಂಕಟೇಶಾಯನಮಃ ಅಂತ ಅಂದುಕೊಂಡಿದ್ದೆವು. ಸೆನ್ಸಾರ್ ಮಂಡಳಿ ಅವರು ಹೊಗಳಿದರು. ಆದರೆ ಅವರ ಮಾರ್ಗದರ್ಶನದ ಪ್ರಕಾರವೇ ಟೈಟಲ್ ಅನ್ನು ಬದಲಾಯಿಸಿದೆವು ಎಂದಿದ್ದಾರೆ.
ನಿರ್ಮಾಪಕ ಜನಾರ್ದನ್ ಪಿ ಮಾತನಾಡಿ, ನಿರ್ಮಾಪಕ ಅನ್ನೋದನ್ನ ಬಿಟ್ಟರೆ ಉಳಿದ ಜವಬ್ದಾರಿಯನ್ನೆಲ್ಲಾ ಅವರೇ ತಲೆ ಮೇಲೆ ಹಾಕಿಕೊಂಡು ನಿಭಾಯಿಸಿದರು. ಸಮಯ ಮಾಡಿಕೊಂಡು ಬಂದು ಹೋಗಿ ಅಂತಷ್ಟೇ ಹೇಳ್ತಾ ಇದ್ದರು. ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ. ನೋಡಿ ಹಾರೈಸಿ ಎಂದರು.
ಅಭಿನಯ ಮಾತನಾಡಿ, “ಹರೀಶ್ ನಾನು ಹೋಗ್ಲಿ ಬಿಡಿ ಸರ್ ಎಂಬ ಕಾಮಿಡಿ ಸೀರಿಯಲ್ ನಲ್ಲಿ ಮಾಡ್ತಾ ಇದ್ದೆವು. ಅಂದೇ ನಾನು ಇವರ ಎನರ್ಜಿ ನೋಡಿ ನೀವೂ ಹೀರೋ ಆಗಬಹುದು ಎಂದಿದ್ದೆ. ಆಮೇಲೆ ಹೀರೋ ಆಗಿ ಮಿಂಚಿದ್ರು. ನಾನು ಒಮ್ಮೆ ಕೇಳಿದ್ದೆ ಏನ್ ಹರೀಶ್ ನಮ್ಮನ್ನೆಲ್ಲಾ ಹಾಕಿಕೊಳ್ಳೋದೆ ಇಲ್ಲ ಅಂತ. ಅದಾದ ಮೇಲೆ ಎಷ್ಟೋ ದಿನಕ್ಕೆ ಕಾಲ್ ಮಾಡಿ ಈ ಪಾತ್ರ ಕೊಟ್ಟರು” ಎಂದರು.

ಲವ್ ಕಾಕ್ಟೇಲ್ ಸಿನಿಮಾಗೆ ಹರೀಶ್ ರಾಜ್ ಅವರೇ ಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಶ್ರೀ ಲಕ್ಷ್ಮೀ ಜನಾರ್ದನ ಬ್ಯಾನರ್ ಮೂಲಕ ಪಿ ಜನಾರ್ದನ್ ಅವರು ನಿರ್ಮಾಣ ಮಾಡಿದ್ದು, ಪ್ರವೀಣ್ ಶ್ರೀನಿವಾಸ ಮೂರ್ತಿ ಸಂಗೀತ, ಜೀವನ್ ಪ್ರಕಾಶ್ ಸಂಕಲನ, ರಾಜಾ ಶಿವಶಂಕರ್ ಛಾಯಾಗ್ರಹಣ ನೀಡಿದ್ದಾರೆ. ಸಿನಿಮಾದ ಸಂಪರ್ಕವನ್ನ ರಮಿತ್ ಏಲಕ್ಕಿ ನಡೆಸುತ್ತಿದ್ದಾರೆ. ಹರೀಶ್ ರಾಜ್, ಪ್ರಕೃತಿ ಪ್ರಸಾದ್, ತಬಲನಾಣಿ, ಅಶೋಕ್, ಉಮಾಶ್ರೀ, ಅಭಿನಯ ಸೇರಿದಂತೆ ಹಲವರು ತಾರಾಗಣದಲ್ಲಿದ್ದಾರೆ.
