ಶಬರಿ ಹಾಡಿನ ಖುಷಿಯಲ್ಲಿ ಬಾಲಾಜಿ, ಓಂ ಪ್ರಕಾಶ್ ರಾವ್ ಭಾಗಿ

‘ಒರಟ’ ಚಿತ್ರದ ಯಾರೋ.. ಹಾಡು ನನಗೆ ಇಷ್ಟವಾಗಿತ್ತು. ಮತ್ತೆ ಇದೀಗ ಅಂಥದ್ದೇ ಜೀಪ್, ಒಳ್ಳೆಯ ಹಾಡಿನೊಂದಿಗೆ ನಿರ್ದೇಶಕ ಶ್ರೀ ಮರಳಿದ್ದಾರೆ. ಸಿನಿಮಾ ಕೂಡ ಚೆನ್ನಾಗಿರುತ್ತೆ ಅಂದುಕೊಂಡಿದ್ದೇನೆ ಎಂದರು ಬಾಲಾಜಿ. ಅವರು ಶಬರಿ ಚಿತ್ರದ ಹಾಡು ಲಾಂಚ್ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಪಾಲ್ಗೊಂಡು ಈ ಮಾತು ನುಡಿದರು.

ಚಿತ್ರದ ನಾಯಕ ಸಮರ್ಥ್ ಅವರಿಗೆ ಇದು ಹೊಸ ಸಿನಿಮಾ ಅಂತ ಅನಿಸಲ್ಲ. ಅಷ್ಟು ಚೆನ್ನಾಗಿ ನಟಿಸಿದ್ದಾರೆ. ನಿರ್ಮಾಪಕ ಸುಧಾಕರ ರೆಡ್ಡಿಯವರು ನಮ್ಮ ಸ್ನೇಹಿತರ ವಲಯದಲ್ಲಿ ಬದರಿ ಎಂದೇ ಪ್ರಸಿದ್ಧ. ಅವರಿಗೂ ಚಿತ್ರತಂಡಕ್ಕೂ ಈ ಸಿನಿಮಾ ಒಳ್ಖೆಯದು ಮಾಡಲಿ ಎಂದು ನಟ ವೀರಾಸ್ವಾಮಿ ಬಾಲಾಜಿ ಶುಭ ಕೋರಿದರು. ಹಾಡು ಲಾಂಚ್ ಮಾಡಿದ ಹಿರಿಯ ನಿರ್ದೇಶಕ ಓಂ ಪ್ರಕಾಶ್ ರಾವ್, ಮೇಕಿಂಗ್ ಮನ ಸೆಳೆಯುವಂತಿದೆ. ಒಳ್ಳೆಯದಾಗಲಿ ಎಂದರು. ಮತ್ತೋರ್ವ ಅತಿಥಿಯಾಗಿ ಆಗಮಿಸಿದ ನಿರ್ದೇಶಕ ರಘುರಾಮ್ ಮಾತನಾಡಿ,
ಶಬರಿ ಎನ್ನುವ ಹೆಸರಿನಂತೆ ಬದರಿಯವರು ಒಳ್ಳೆಯ ನಿರ್ಮಾಪಕರಾಗಲು ಕಾದಿದ್ದಾರೆ. ಅವರಿಗೆ ಶುಭವಾಗಲಿ ಎಂದರು.

ನಿರ್ದೇಶಕ ಶ್ರೀ ಮಾತನಾಡಿ, ಇದು ‘ಒರಟ’ ಚಿತ್ರದ ಬಳಿಕ ನಾನು ನಿರ್ದೇಶಿಸುತ್ತಿರುವ 6ನೇ ಚಿತ್ರ. ಬಿಡುಗಡೆಯಾದ ‘ತಂದಾನಿ ತಾನನೋ’ ಹಾಡಿನಲ್ಲಿ ನಿಮಗೆಲ್ಲ ಎರಡು ಪಾತ್ರಗಳು ಕಾಣಿಸುತ್ತವೆ. ಆದರೆ ನನ್ನ ಕಣ್ಣಿಗೆ ಮೂರು ಪಾತ್ರಗಳಿವೆ. ಮೂರನೆಯ ಪಾತ್ರ ಜೀಪ್ ಎಂದರು.
ಇಂಥ ನಿರ್ಮಾಪಕ‌ರು ಸಿಗಲು ನಾನು ಪುಣ್ಯ ಮಾಡಿದ್ದೇನೆ.‌ ನಾನು ಅಗ್ರಿಮೆಂಟ್ ಹಾಕಿ ಸಿನಿಮಾ ರೆಡಿ ಮಾಡಿದ್ದೇನೆ. ಹೀಗೆ ಮಾಡದಿದ್ದರೆ ಅದು ನಾವು ನಿರ್ಮಾಪಕರನ್ನು ಕಳೆದುಕೊಳ್ಳುತ್ತೇವೆ. ಸಪ್ಟೆಂಬರ್ ನಲ್ಲಿ ಚಿತ್ರದ ಬಿಡುಗಡೆಗೆ ಪ್ಲ್ಯಾನ್ ಮಾಡಿದ್ದೇವೆ ಎಂದರು.

ಚಿತ್ರದ ನಾಯಕ ಸಮರ್ಥ್, ಈ ಚಿತ್ರದಲ್ಲಿ ಮೂರು ಹಾಡುಗಳಿವೆ. ಒಂದು ಹಾಡು ಮಾಂಟೇಜಸ್ ತರಹ ಹೋಗುತ್ತದೆ. ಎರಡನೇದು ತಂಗಾಳಿ ಎನ್ನುವಂಥದು. ಮೂರನೇದು ಧನ್ವಿ ಜತೆಗೆ ಡ್ಯಾನ್ಸ್ ಮಾಡಿರುವ ಈ ಹಾಡು ಎಂದರು. ಚಿತ್ರದಲ್ಲಿ ಶಬರಿ ಪಾತ್ರಮಾಡಿರುವ ಬಾಲ ನಟಿ ಧನ್ವಿ ಮಾತನಾಡಿ, ಖುಷಿ ಹಂಚಿಕೊಂಡರು. ಬಳಿಕ ಧನ್ವಿ ಮತ್ತು ಸಮರ್ಥ್ ಅದೇ ಹಾಡಿಗೆ ಹೆಜ್ಜೆ ಹಾಕಿದರು.

ಒಳ್ಳೆಯ ಅದ್ಭುತ ಸಿನಿಮಾ‌ ಕೊಟ್ಟಿದ್ದಾರೆ. ನನ್ನ ಮಗನ ನಟನೆ ಬಗ್ಗೆ ಹೆಮ್ಮೆ ಅನಿಸಿದೆ. ಬಾಲನಟಿಗೂ ನಮ್ಮ ಪುತ್ರನಿಗೂ ಈ ಚಿತ್ರದಿಂದ ಬ್ರೇಕ್ ಸಿಗಲಿ ಎಂದು ಹಾರೈಸುತ್ತೇನೆ ಎಂದು ನಿರ್ಮಾಪಕ‌ರಲ್ಲೊಬ್ಬರಾದ ರಮೇಶ್ ಅವರು ಹೇಳಿದರು. ಮತ್ತೋರ್ವ ನಿರ್ಮಾಪಕ ಬದ್ರಿ ಮಾತನಾಡಿ ಕಷ್ಟಪಟ್ಟು ಮೇಲೆ ಬಂದಿರುವುದಾಗಿ ಹೇಳಿ ಭಾವುಕರಾದರು. ಉದ್ಯಮಿಯಾಗಿ ಯಶಸ್ವಿಯಾಗಿದ್ದೇನೆ. ಬಾಲಾಜಿಯವರಲ್ಲಿ ಮೊದಲೇ ಆಶೀರ್ವಾದ ಬೇಡಿದ್ದೇನೆ. ಎಲ್ಲವೂ ಯಶಸ್ವಿಯಾದರೆ, ಮುಂದೆ ಬಾಲಾಜಿಯವರನ್ನೇ ನಾಯಕನಾಗಿಸಿ ಶ್ರೀಯವರದೇ ನಿರ್ದೇಶನದಲ್ಲಿ ಸಿನಿಮಾ ನಿರ್ಮಿಸುವ ಯೋಜನೆ ಇದೆ ಎಂದರು.

ನಾನು ಪಲ್ಲವಿಗೆ ಸಂಗೀತ ಸಂಯೋಜಿಸಿ ಚರಣ ಬರೆಯುವಷ್ಟರಲ್ಲಿ ನಿರ್ದೇಶಕ ಶ್ರೀಯವರೇ ಸಾಹಿತ್ಯ ರಚಿಸಿದ್ದಾಗಿ ಸಂಗೀತ ನಿರ್ದೇಶಕ ಹೇಮಂತ್ ಕುಮಾರ್ ಹೇಳಿದರು. ಬಿಡುಗಡೆಯಾದ ಹಾಡಿನ ಪಲ್ಲವಿಯನ್ನು ಗಾಯಕ ಅಶ್ವಿನ್ ವೇದಿಕೆ ಮೇಲೆ ಹಾಡಿ ರಂಜಿಸಿದರು.

ಹಾಡು ಚೆನ್ನಾಗಿದೆ. ಹಾಡಿನ ದೃಶ್ಯರೂಪ ನೋಡುವಾಗ ಭಜರಂಗಿ ಭಾಯ್‌ಜಾನ್ ಹಾಡು ನೆನಪಾಯಿತು.
ಫ್ಲ್ಯಾಶ್ ಬ್ಯಾಕ್ ನಲ್ಲಿ ನಾಯಕನ ತಾಯಿಯ ಪಾತ್ರ ಮಾಡಿದ್ದೇನೆ ಎಂದು ನಟಿ ಸೀತಾ ಹರ್ಷವರ್ಧನ್ ಹೇಳಿದರು.

ಸಿವಿಲ್ ಇಂಜಿನಿಯರ್ ಆಗಿರುವ ರಮೇಶ್ , ಸುಧಾಕರ್ ರೆಡ್ಡಿ ಯಾಕಸಿರಿ ಮತ್ತು ವಿಷ್ಣುಕಾಂತ್ ಎ ಜೊತೆಗೂಡಿ ಬರವಿ ಫಿಲಂಸ್ ಬ್ಯಾನರಿನಡಿಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಒರಟ ಶ್ರೀ ನಿರ್ದೇಶನವಿರುವ ಈ ಚಿತ್ರದಲ್ಲಿ ಸಮರ್ಥ್ ಮತ್ತು ಕೃತ್ತಿಕಾ ಗೌಡ ನಾಯಕ ನಾಯಕಿಯರಾಗಿ ನಟಿಸಿದ್ದಾರೆ. ಧನ್ವಿ, ಎಂ.ಕೆ ಮಠ, ನೀನಾಸಂ ಅಶ್ವತ್, ಯೋಗೇಶ್ ವೀರ್, ಮಂಡ್ಯ ಸಿದ್ದು ಮುಂತಾದವರ ತಾರಾಗಣವಿದೆ. ಬಿ.ಆರ್ ಹೇಮಂತ್ ಕುಮಾರ್ ಸಂಗೀತ ನಿರ್ದೇಶನ, ಸಾಮ್ರಾಟ್ ನಾಗರಾಜ್ ಛಾಯಾಗ್ರಹಣ, ಕೆ. ಗಿರೀಶ್ ಕುಮಾರ್ ಸಂಕಲನ, ಹಾಗೂ ಕೋರ ಚಿನ್ನಯ್ಯ ರವರ ಸಾಹಸ ಈ ಚಿತ್ರದಲ್ಲಿದೆ.

Recommended For You

Leave a Reply