ಚಂದನವನ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್ ಸಮಿತಿಯ ಮಾಧ್ಯಮಗೋಷ್ಠಿ ಇಂದು ಬೆಳಿಗ್ಗೆ ಪ್ರೆಸ್ ಕ್ಲಬ್ ನೆರವೇರಿತು. ಸಮಾರಂಭದಲ್ಲಿ ಅತಿಥಿಯಾಗಿ ಬಂದ ಕಲಾವಿದರಾದ ರಮೇಶ್ ಅರವಿಂದ್ ಮತ್ತು ಹರಿಪ್ರಿಯಾ ಆಗಮಿಸಿ ಅಕಾಡೆಮಿಯ ಟ್ರೋಫಿ ಅನಾವರಣಗೊಳಿಸಿದರು.
“ಸಾಮಾನ್ಯವಾಗಿ ನಟರಾಜನ ಚಿತ್ರಗಳು ರಾಕ್ಷಸನೋರ್ವನನ್ನು ತುಳಿಯುವ ಹಾಗೆ ಇರುತ್ತವೆ. ಆದರೆ ಟ್ರೋಫಿಯಲ್ಲಿರುವ ನಟರಾಜ ಪ್ರತಿಮೆ ಯಾರನ್ನು ಕೂಡ ತುಳಿಯುತ್ತಿಲ್ಲ. ಇದೊಂದೇ ಉದಾಹರಣೆ ಸಾಕು; ಈ ಅವಾರ್ಡ್ ಯಾರನ್ನು ಕೂಡ ತುಳಿಯುತ್ತಿಲ್ಲ, ಮನರಂಜನೆ ಮಾತ್ರ ನೀಡುತ್ತಿದೆ ಎಂದು ತಿಳಿಸುತ್ತಿದೆ.” ಎಂದು ರಮೇಶ್ ಹೇಳಿದರು. “ಕಲಾವಿದರಿಗೆ ಪ್ರಶಸ್ತಿ, ಚಪ್ಪಾಳೆ ಮತ್ತು ಬಾಕ್ಸ್ ಆಫೀಸ್ ಕಲೆಕ್ಷನ್ ಮೊದಲಾದವು ಮೊಬೈಲ್ ಫೋನ್ ಗೆ ಚಾರ್ಜರ್ ಇದ್ದಂತೆ” ಎಂದು ರಮೇಶ್ ಹೇಳಿದರು.
ನಟಿ ಹರಿಪ್ರಿಯಾ ಅವರು ಮಾತನಾಡಿ, “ನಾನು ಸಾಮಾನ್ಯವಾಗಿ ಯಾವುದೇ ಅವಾರ್ಡ್ ಗಳನ್ನು ಬಯಸುವುದಿಲ್ಲ. ಯಾಕೆಂದರೆ ನಾನು ನಿರೀಕ್ಷೆ ಮಾಡಿದ ಸಂದರ್ಭದಲ್ಲಿ ಅವಾರ್ಡ್ ಬಂದಿಲ್ಲ. ಈಗ ಏನಿದ್ದರೂ ಮೀಡಿಯಾದಲ್ಲಿ ವಿಮರ್ಶಕರು ಏನು ಬರೆದಿದ್ದಾರೆ ಎಂದು ನೋಡಿ ಖುಷಿ ಪಡುತ್ತಿರುತ್ತೇನೆ. ಇದೀಗ ವಿಮರ್ಶಕರ ಕಡೆಯಿಂದಲೇ ಪ್ರಶಸ್ತಿ ಘೋಷಿಸಲ್ಪಡುತ್ತಿರುವುದು ಖುಷಿ ತಂದಿದೆ” ಎಂದರು.
ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ಕೆ.ಜೆ ಕುಮಾರ್, ಸದಾಶಿವ ಶೆಣೈ ಹಾಗೂ ಆಯೋಜಕ ಸಮಿತಿಯ ಶಶಿಪ್ರಸಾದ್ ಉಪಸ್ಥಿತರಿದ್ದರು. ಪತ್ರಕರ್ತ ಯತಿರಾಜ್ ಕಾರ್ಯಕ್ರಮ ನಿರೂಪಿಸಿದರು.


